Posted by: pavankir | ಏಪ್ರಿಲ್ 5, 2009

ನಮ್ಮನ್ನಾಳುವವರು ಹೇಗಿರಬೇಕು?

ಚುನಾವಣೆಯ ಮಹಾ ಸಮರಕ್ಕೆ ಭಾರತ ಭೂಮಿ ಸಿದ್ದವಾಗುತ್ತಿದೆ.ದಿನ ನಿತ್ಯದ ರಾಜಕೀಯ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿಯಾಗಿವೆ. ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಈ ಚುನಾವಣೆ ನಮಗೆ ಎಂತಹ ನಾಳೆಗಳನ್ನು ನೀಡಬಹುದೆಂದು ಯೋಚಿಸಿದರೆ ಕಳವಳವಾಗುತ್ತದೆ. ನಮ್ಮ ನಾಯಕರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗಿದೆ. ನಮ್ಮದು ಸಂಪೂರ್ಣ ಪ್ರಜಾಪ್ರಭುತ್ವ. ನಮ್ಮ ಮತ ದೇಶದ ಭವಿಷ್ಯ ರೂಪಿಸುತ್ತದೆ. ಪ್ರತಿಯೊಬ್ಬ ಭಾರತೀಯನೂ ಮತವನ್ನು ಚಲಾಯಿಸಲೇ ಬೇಕು. ಜವಾಬ್ದಾರಿಯುತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಲೇಬೇಕು. ಇದೆಲ್ಲಾ ನಮಗೆ ತಿಳಿದದ್ದೇ, ಮತ್ತೇಕೆ ಪುನರಾವರ್ತನೆ? ಎಂದು ನಿಟ್ಟುಸಿರ ಚೆಲ್ಲದಿರಿ. ಮತವನ್ನು ಚಲಾಯಿಸಿ ನಮ್ಮ ದೇಶದ ನಾಯಕರನ್ನು ಆಯ್ಕೆ ಮಾಡಬೇಕೆಂಬುದು ಸತ್ಯ, ಆದರೆ ನಿಜವಾದ ನಾಯಕರು ಯಾರೆಂಬುದು ಇಲ್ಲಿ ಪ್ರಸ್ತಾಪಿಸಿರುವ ಪ್ರಶ್ನೆ?

ಸರ್ವೇ ಗುಣಃ ಕಾಂಚನಮಾಶ್ರಯತಿಃ|| ಎಂಬ ಮಾತಿನಂತೆ, ನಮ್ಮಲ್ಲಿರುವ ಎಲ್ಲಾ ಒಳ್ಲೆಯ ಗುಣಗಳು ಹಣವನ್ನರಸಿ ಹೋಗುತ್ತಾವಂತೆ. ನಮ್ಮ ಯಾವುದೇ ರಾಜಕೀಯ ಧುರೀಣರು ದೇಶಕ್ಕಾಗಿ ತಮ್ಮನ್ನು ತೊಡಗಿಸಿಲ್ಲ, ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ ಇಡೀ ದೇಶವನ್ನೇ ಬಲಿಗೊಡುತ್ತಿದ್ದಾರೆ. ನಾಯಕನಿಗೆ ಒಂದು ನಿರ್ಧಿಷ್ಟವಾದ ಗುರಿ ಇರಬೇಕು. ಆ ಗುರಿಯನ್ನು ಸಾಧಿಸುವ ಬಗ್ಗೆ ಧೃಡವಾದ ಸಂಕಲ್ಪ ಬೇಕು. ಅಂತಹ ಗುರಿಯ ಸಾದಕ ಬಾಧಕಗಳ ಪೂರ್ಣ ಅರಿವಿರಬೇಕು. ನಾಯಕತ್ವ ಒಂದು ನಂಬಿಕೆ. ನಾಯಕನ್ನನ್ನು ಅನುಸರಿಸುವ ಎಲ್ಲರ ಹಿತವನ್ನು ಕಾಪಿಡುವ ಅಂತಃ ಶ್ರದ್ದೆ ಇರಬೇಕು. ನಾಯಕ ಯಾವುದೇಕಾರಣಕ್ಕೂ ಅಧಿಕಾರ ಲಾಲಸಿಯಾಗಿರಬಾರದು…..ಹೀಗೆ ಹತ್ತು ಹಲವು ಗುಣಗಳನ್ನು ಪಟ್ಟಿ ಮಾಡಬಹುದು. ಗುಣ ಲಕ್ಷಣದ ಪಟ್ಟಿ ಬೆಳೆದೀತೇ ಹೊರತು, ನಾಯಕರ ಪಟ್ಟಿ ಬೆಳೆಯುವುದಿಲ್ಲ.

ನಿಜವಾದ ನಾಯಕನನ್ನು ಹುಟ್ಟು ಹಾಕುವ ಯಾ ಇರುವ ನಾಮ ಮಾತ್ರ ನಾಯಕರಲ್ಲಿ ಅಂತಹ ಗುಣವನ್ನು ನಿಕ್ಷೇಪಿಸುವ ಸಾಮರ್ಥ್ಯ ನಮಗಿದೆಯೆ ಎಂಬುದು ಇಲ್ಲಿರುವ ಮುಖ್ಯ ಪ್ರಶ್ನೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಂತವನೂ ರಾಜಕೀಯವನ್ನು ಪ್ರವೇಶ ಮಾಡಬಹುದು. ದಾಂಧಲೆ ನೆಡೆಸಿದ ಪುಡಾರಿಯಿಂದ ಹಿಡಿದು ದಾರ್ಮಿಕ ಗುರುಗಳ ವರೆಗೆ ಎಲ್ಲರೂ ರಾಜಕೀಯ ನೇತಾರರೆ. ಹೀಗಿರುವಾಗ ನಾವು ಒಬ್ಬ ಪ್ರಜ್ಞಾವಂತ ನಾಯಕನನ್ನು ಆಯ್ಕೆ ಮಾಡುವುದು ಕಷ್ಟ ಸಾದ್ಯವೇ ಸರಿ. ಕಸದಿಂದ ರಸವೆನ್ನುವಂತೆ ಇಂತಹ ಸ್ಥಿತಿಯಲ್ಲೂ ನಾವು ನಮ್ಮ ನಡುವಿರುವ ಸದ್ಗುಣಿ ನಾಯಕರನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಕುರುಕ್ಷೇತ್ರ ಯುದ್ದಾನಂತರ ಭೀಷ್ಮ ಯುಧಿಷ್ಟಿರನಿಗೆ ಭೋಧಿಸಿದ ನಿಜವಾದ ನಾಯಕ ಯಾ ನೇತಾ ಯಾ ಅರಸನ ಲಕ್ಷಣಗಳನ್ನು ಗಮನಿಸಿ.

  1. ಪ್ರಜಾ ಪ್ರೀತಿ
  2. ದೈವವೊಂದನ್ನೇ ನಂಬದ ಪುರುಷ ಪ್ರಯತ್ನ
  3. ಸದಾ ಕಾರ್ಯ ಶೀಲತೆ
  4. ಸತ್ಯ ನಿಷ್ಟೆ
  5. ಗುಣವಂತಿಕೆ
  6. ಉತ್ತಮ ನೆಡವಳಿಕೆ
  7. ಮೃದುತ್ವ
  8. ತೀಕ್ಷ್ಣತೆ
  9. ಸರಳತೆ
  10. ದಯಾಪರತೆ
  11. ಪ್ರಾಮಾಣಿಕ ವ್ಯವಹಾರತನ
  12. ರಾಜ್ಯದ ಬೊಕ್ಕಸ ತುಂಬುವ ಕುಶಲತೆ
  13. ಅನಾಥ ರಕ್ಷಣೆ
  14. ಪ್ರಜ್ಞಾವಂತಿಕೆ

ಸ್ನೇಹಿತರೇ, ಯೋಚಿಸಿ ನೋಡಿ. ನಮ್ಮ ನಡುವಿರುವ ಯಾವ ನಾಯಕರಲ್ಲಿ ಇಂತಹ ಗುಣಗಳಿವೆ. ಗುಣದ ಗಣಿಯಾದ ನಾಯಕರನ್ನು ಆಯ್ಕೆ ಮಾಡಿ ಒಂದು ಸುಂದರ ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಾಗಿದೆ. ಆದ್ದರಿಂದ ನಿಮ್ಮ ಮೌಲ್ಯಯುತವಾದ ಮತವನ್ನು ಚಲಾಯಿಸಿ..ಭವ್ಯ ಭಾರತದ ನಿರ್ಮಾಣಕ್ಕೆ ಸುವರ್ಣಾಕ್ಷರ ಬರೆಯೋಣ…


ಪ್ರತಿಕ್ರಿಯೆಗಳು

  1. ಆರೋಗ್ಯಕರವಾದ ಆಲೋಚನೆ. ಈ ನಿಟ್ಟಿನಲ್ಲಿ ಯೋಚಿಸುವವರ ಸಂತತಿ ಸಾವಿ ಸಾವಿರವಾಗಲಿ ಎಂದು ಹಾರೈಸುತ್ತೇನೆ.

  2. ಭೀಷ್ಮ ಯುಧಿಷ್ಟಿರನಿಗೆ ಭೋಧಿಸಿದ ನಿಜವಾದ ನಾಯಕ ಯಾ ನೇತಾ ಯಾ ಅರಸನ ಲಕ್ಷಣಗಳನ್ನು ನಮ್ಮ ನಾಯಕರು ಅನುಸರಿcdare ನಮ್ಮ ರಾಷ್ಟ್ರ -Ramaraja vaditu.


ನಿಮ್ಮ ಟಿಪ್ಪಣಿ ಬರೆಯಿರಿ

ವಿಭಾಗಗಳು