ಗೆಳೆಯರೆ, ತುಂಬಾ ದಿನಗಳಿಂದ ಬರವಣಿಗೆ ಸ್ಥಗಿತಗೊಂಡಿತ್ತು. ಕ್ಷಮೆಯಿರಲಿ. ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ, ಪರಿಸರದೊಂದಿಗೆ ಬಹಳಷ್ಟು ಒಡನಾಟವಿರಿಸಿಕೊಂಡು ಬೆಳೆದ ನನಗೆ ಹೀಗೇ ತೋಚಿದ್ದು ಗೀಚುವ ಮನಸ್ಸಾಯ್ತು. ಅಭಿಪ್ರಾಯ ತಿಳಿಸಿ, ಮತ್ತಷ್ಟು ಹುಮ್ಮಸ್ಸಿನಿಂದ ಬರೆಯುತ್ತೇನೆ.
ದಶಕೂಪ ಸಮೋವಾಪಿ, ದಶವಾಪೀ ಸಮೋಹ್ರದಃ|
ದಶ ಹ್ರದಸ್ಸಮಃ ಪುತ್ರೋ, ದಶಪುತ್ರಃ ಸಮೋದ್ರುಮಃ||
ಅಂದರೆ, “ಒಂದು ಕೆರೆ ಹತ್ತು ಬಾವಿಗಳಿಗಿಂತ ಉತ್ತಮ, ಒಂದು ಸರೋವರ ಹತ್ತು ಕೆರೆಗಳಿಗಿಂತ ಉತ್ತಮ, ಹತ್ತು ಸರೋವರಗಳಿಗಿಂತ ಒಬ್ಬ ಸುಪುತ್ರನನ್ನು ಪಡೆಯುವುದು ಉತ್ತಮ, ಇದೆಲ್ಲಕ್ಕಿಂತಲೂ, ಒಂದು ವ್ರೂಕ್ಶವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದುಕ್ಕಿಂತ ಉತ್ತಮ”. ಮನುಷ್ಯನ ಬದುಕು ನಿರ್ಬರವಾಗಿರುವುದು ಪ್ರಕೃತಿಯ ಮೇಲೆ. ಪರಿಸರ ತನ್ನೆಲ್ಲಾ ಕೊಡುಗೆಗಳನ್ನು ಕೊಟ್ಟು ನಮ್ಮನ್ನು ಬೆಳೆಸುತ್ತದೆ. ಪರಿಸರ ಎಂದಾಗ ಕೇವಲ ವ್ರೂಕ್ಶ ಸಂಪತ್ತು ಮಾತ್ರವಲ್ಲ, ಆದರೆ ಉಳಿದ ಎಲ್ಲಾ ಸಂಪತ್ತಿಗೂ ವೃಕ್ಷಸಂಪತ್ತೇ ಆದಾರವಾಗಿರುವುದರಿಂದ ಪರಿಸರವೆಂದಾಕ್ಷಣ ಮರದ ಕಲ್ಪನೆ ಮೂಡುತ್ತದೆ. ನಮ್ಮ ಸಂಸ್ಕೃತಿ ಪರಿಸರಕ್ಕೆ ನೀಡಿದ ಪ್ರಾಧಾನ್ಯತೆಯನ್ನು ಬೇರಾವುದಕ್ಕೂ ನೀಡಿಲ್ಲ.
ವ್ಱೂಕ್ಶ ಸಂಪತ್ತು ನಮಗೆ ದೇವರು, ವನ್ಯ ಮೃಗಗಳು ನಮಗೆ ಪರೋಕ್ಷ ದೇವರು, ಹರಿಯುವ ನದಿ ನಮಗೆ ತಾಯಿ, ಹಾರಡುವ ಪಕ್ಷಿ ನಮ್ಮ ದೇವರ ವಾಹನ, ಕೊನೆಗೆ ವಿಧ್ವಂಸಕಗಳಾದ ಇಲಿಯೂ ದೇವರೆ. ಇಲ್ಲಿ ದೇವರೆಂಬ ವಿಷಯದ ಕುರಿತು ಚರ್ಚೆ ಬೇಡ. ಆದರೆ ನಮ್ಮ ಸುತ್ತಮುತ್ತಲಿನ ಎಲ್ಲಾ ಚರಾಚರಗಳನ್ನು ಮಾನವಾತೀತ ಶಕ್ತಿಯ ಸ್ಥಾನದಲ್ಲಿರಿಸಿರುವುದು ಅವುಗಳ ವಿಶೇಷತೆಯನ್ನು ತಿಳಿಸುತ್ತದೆ, ಹಾಗೆಯೇ ಅವುಗಳಿಂದಲೇ ನಮ್ಮ ಬದುಕು ಎಂಬ ಸರಳ ಸತ್ಯವನ್ನು ತಿಳಿಸುತ್ತದೆ. ಈ ವೃಕ್ಷಗಳನ್ನು ನಮ್ಮವರು ಆರು ಬಗೆಯಾಗಿ ವಿಂಗಡಿಸಿದ್ದಾರೆ -
- ಔಷಧಿ – ಅರ್ಥಾತ್ ಜೀವನವಾರಿ ಸದೃಶವಾದದ್ದು, ಭತ್ತ, ರಾಗಿ ಇತ್ಯಾದಿ.
- ವನಸ್ಪತಿ – ಹೂ ಬಿಡದೆ ಹಣ್ಣು ಬಿಡುವ ಹೆಮ್ಮರಗಳು, ಉದಾ: ಅಶ್ವತ್ಥ, ಹಲಸು…ಇತ್ಯಾದಿ
- ದ್ರುಮಾಃ – ಹೂ ಬಿಟ್ಟು ಹಣ್ಣು ಬಿಡುವವು, ಉದಾ: ಮಾವು, ತೆಂಗು, ಅಡಿಕೆ..ಇತ್ಯಾದಿ
- ಲತಾ – ಬಳ್ಳಿಗಳು, ಮಲ್ಲಿಗೆ, ಅವರೇ, ಇತ್ಯಾದಿ
- ತ್ವಗ್ಗಿರಾಃ – ಬೆತ್ತ, ಬಿದಿರುಗಳಂತವು.
ಪರಿಸರ ಮನುಷ್ಯನಿಗೆ ತನ್ನೆಲ್ಲಾ ಕೊಡುಗೆಗಳನ್ನು ನೀಡಿದೆ. ಕುಡಿಯಲು ಜಲ, ಬದುಕಲು ನೆಲ, ಉಸಿರಾಡಲು ಶುದ್ಧ ಗಾಳಿ, ಹೀಗೆ ಹತ್ತು ಹಲವು. ಪ್ರಕೃತಿ ವೈಜ್ಞಾನಿಕತೆಗೂ ಮೀರಿ, ಎಲ್ಲವನ್ನೂ ವ್ಯವಸ್ಥಿತವಾಗಿರಿಸಿದೆ. ತನ್ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅಲ್ಲಲ್ಲೇ ಬದುಕಲು ಆಹಾರಾದಿಗಳನ್ನು ಓದಕಿಸಿದೆ. ತನ್ನ ಸಮತೋಲನವನ್ನು ಕಾಪಾಡಲು ಜೀವಚಕ್ರವನ್ನು ನಿರ್ಮಿಸಿದೆ. ತನ್ನ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಗಂಡು ಹೆಣ್ಣೆಂಬ ಪ್ರತ್ಯೇಕತೆಯನ್ನು ಸೃಷ್ಟಿಸಿದೆ. ವಿಜ್ಞಾನ ತನ್ನ ಶೋಧದಿಂದ ಬಯಲು ಮಾಡಲಾಗದ ಅದೆಷ್ಟೋ ವಿಚಿತ್ರಗಳನ್ನು ತನ್ನೋಳಗೆ ಹುದುಗಿಸಿಕೊಂಡಿದೆ. ನಮ್ಮ ಪೂರ್ವಜರು ಪರಿಸರದೊಂದಿಗೆ ಹೊಂದಿದ್ದ ಅನುಬಂಧವನ್ನು ನಾವಿಂದು ಹೊಂದಿಲ್ಲ. ಮುಂದಿನ ನಮ್ಮ ತಲೆಮಾರು ಪರಸರದ ಕುರಿತಾದ ಅರಿವನ್ನೇ ಹೊಂದಿರುವುದಿಲ್ಲ. ಜನ್ಮ ಕೊಟ್ಟ ತಾಯನ್ನೇ ಮರೆಯುವ ನಾವು ಜೀವನ ಕೊಟ್ಟ ಪರಿಸರವನ್ನು ಮರೆತರೆ ಅಚ್ಚರಿಯೇನು?!

ದರೆಗುರುಳಿದ ವನದೇವಿ..!
ಮನುಷ್ಯ ಎಂಬ ಶಬ್ದವು ಗುಣವಾಚಕ. ಮನುಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ಮಾನವನಾಗಬಹುದೇ ಹೊರಟು, ಮನುಷ್ಯನಾಗಲಾರ. ಯಾವನು ಮನೀಷಿಯೋ ಅವ್ನು ಮಾತ್ರವೇ ಮನುಷ್ಯನಾಗುತ್ತಾನೆ. ಅಂದರೆ, ಯಾವನು ಪ್ರಜ್ನೆಯುಳ್ಳವನೋ, ವಿವೇಕಶಾಲಿಯೋ ಅವನು ಮಾತ್ರವೇ ಮನುಷ್ಯನು. ಆದರೆ ಪ್ರಜ್ಞಾಪೂರ್ಣ, ವಿವೇಕಶಾಲಿ ಮನುಷ್ಯ ತನ್ನ ಅಮಿತವಾದ ಆಸೆಯನ್ನು ಇಡೇರಿಸಿಕೊಳ್ಳುವುದಕ್ಕೆ ಪರಿಸರದ ಮೇಲೆ ಪ್ರಹಾರ ಮಾಡುತ್ತಾನೆ. ಸಹನಾ ಮೂರ್ತಿಯಾದ ಪರಿಸರ ಆವಾಗಲೇ ತನ್ನ ಪ್ರಭಾವವನ್ನು ತೋರಿಸುವುದು. ಚಂಡಮಾರುತ, ಕ್ಷಾಮ, ತ್ಸುನಾಮಿಯೇ ಮೊದಲಾದ ಮಾರಣಹೋಮ ನೆಡೆಯುವುದು ಈ ಕಾರಣದಿಂದ. ತನ್ನ ಮೈಗೆ ಕಲ್ಲೆಸೆದವರಿಗೆ ತಿರುಗಿ ಹಣ್ಣನ್ನು ನೀಡುವ ಮರವನ್ನು ಮುಲಾಜಿಲ್ಲದೇ ಕಡಿಯುವವರು ನಾವು. ಯಾವ ಭೂಗರ್ಭದಲ್ಲಿ ಬಂಗಾರ ದೊರೆಯುವುದೋ ಅದೇ ಭೂಗರ್ಭವನ್ನು ಬರಿದಾಗಿಸಹೊರಟವರು ನಾವು. ಛೇ!! ಹೆತ್ತ ತಾಯ ಕರುಳ ಬಾಗೇವ ನೀಚರು ನಾವು…!
ಗೆಳೆಯರೇ, ನಾವು ನಮ್ಮ ಮುಂದಿನ ಪೀಳಿಗೆಯನ್ನು ಕಾಣಬೇಕಾದರೆ, ನಮ್ಮ ಈ ದರಣಿಯನ್ನು ಮುಂದಿನವರಿಗಾಗಿ ಉಳಿಸಲೇಬೇಕಾಗಿದೆ. ಈ ಕುರಿತು ನಾವು ಮಾಡುವ ಕಾರ್ಯದ ಕುರಿತು ಚಿಂತನೆ ಅಗತ್ಯ. ಬರೀ ಮಾತು ಯಾ ಒಂದು ಲೇಖನ ಪ್ರಯೋಜನಕ್ಕೆ ಬಾರದು. ಇದು ಸಾರ್ಥಕವಾಗುವುದು ನಾವು ಈ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯಿಟ್ಟಾಗ. ಆದುದರಿಂದ ಗೆಳೆಯರೇ, ನಾವು ನೀವೆಲ್ಲಾ ಮಾಡಬೇಕಾದದ್ದು ಏನೆಂದರೆ –
- ನಾವು ವರ್ಷಕ್ಕೆ ಒಂದಾದರೂ ಗಿಡ ನೆಡಬೇಕು.
- ಸೌಕರ್ಯ ಇಲ್ಲದವರು ಗಿಡ ನೆಡುವವರನ್ನಾದರೂ ಪ್ರೋತ್ಸಾಹಿಸಬೇಕು.
- ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ವಿವರಿಸಬೇಕು.
- ನಮಗೆ ತಿಳಿದಷ್ಟು ಮರ-ಗಿಡ, ಪ್ರಾಣಿ-ಪಕ್ಷಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು.
- ಒಟ್ಟಾರೆ ನಮ್ಮ ನೆಲ-ಜಲ ಸಂರಕ್ಷಣೆಗೆ ಪಣ ತೊಡಬೇಕು.
ನಿಮ್ಮ ಅಭಿಮತವನ್ನು, ಈ ನಿಟ್ಟಿನಲ್ಲಿ ನಿಮ್ಮ ಹೆಜ್ಜೆಯನ್ನು ತಪ್ಪದೇ ತಿಳಿಸಿ…..